ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರಮುಖ ವಾರ್ಷಿಕ ಚಟುವಟಿಕೆ ಮಹಿಳಾ ದಿನಾಚರಣೆ. ಈ ಮಹಿಳಾ ದಿನಾಚರಣೆಗೆ ತುಮಕೂರು ವೇದಿಕೆಯಾಗಿದ್ದು ಒಂದು ಬಹಳ ವಿಶೇಷ. ಇದಕ್ಕೆ ಕಾರಣವೇ ತುಮಕೂರಿನ ಅನೇಕ ಮಹಿಳಾ ಹೋರಾಟಗಾರರು, ಸಾಹಿತಿಗಳು. ಇವರು ಸುಮಾರು ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ಹಾಗಾಗಿಯೇ ಈ ವರ್ಷದ ಇಡೀ ಪಯಣಕ್ಕೆ ಅವರೇ ವೇದಿಕೆಯನ್ನು ಒದಗಿಸಿ, ಅದನ್ನು ಆಗುಮಾಡಲು ಟೊಂಕಕಟ್ಟಿ ನಿಂತರು.
ವರ್ಷಪೂರ್ತಿ ಸುಮಾರು ನೂರಾರು ಅರಿವಿನ ಪಯಣ ಕಾರ್ಯಕ್ರಮಗಳು ನಾಲ್ಕು ತಾಲ್ಲೂಕುಗಳಲ್ಲಿ ’ಕಪ್ಪುಡುಗೆಯಲ್ಲಿ ಮಹಿಳೆಯರು’ಆಚರಿಸಿದ್ದು ಮಹಿಳಾ ದಿನಾಚರಣೆಯ ಹೊಸ್ತಿಲಿಗೆ ಯಶಸ್ವಿಯಾಗಿ ತಲುಪಿ, ಮಾರ್ಚ್ ೭ ಮತ್ತು ೮ನೇ ದಿನಗಳಂದು ಎರಡು ದಿನ ತುಮಕೂರಿನಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ನಿನ್ನೆ ತುಮಕೂರಿನ ಟೌನ್ ಹಾಲ್ ಸರ್ಕಲ್ಲಿನಲ್ಲಿ ಸಾಲು ಮರದ ತಿಮ್ಮಕ್ಕ ವೇದಿಕೆಯಲ್ಲಿ ಕೇರಳ ಸರ್ಕಾರದ ಹಾಲಿ ಶಾಸಕರು ಮತ್ತು ಮಾಜಿ ಆರೋಗ್ಯ ಸಚಿವರಾದ ಶ್ರೀಮತಿ ಕೆ ಕೆ ಶೈಲಜಾ ಇವರ ಉಪಸ್ಥಿತಿಯಲ್ಲಿ ಆಗಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಡಾ. ಕೆ ವಿದ್ಯಾಕುಮಾರಿಯವರು ಮೆರವಣಿಗೆ ಉದ್ಘಾಟಿಸಿದರು.
ನಂತರ ಗಾಜಿನ ಮನೆಯಲ್ಲಿ ಸೂಲಗಿತ್ತಿ ನರಸಮ್ಮ ವೇದಿಕೆಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು. ಸಾವಿರಾರು ಜನ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಯಕರ್ತರು ಬಹುತ್ವದ ಕಡೆಗೆ ನಮ್ಮ ನಡಿಗೆ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದೇ ದಿನ ಸಂಜೆ ಸ್ವಾತಂತ್ರ್ಯ ಚೌಕದಲ್ಲಿ ’ಕಪ್ಪುಡುಗೆಯಲ್ಲಿ ಮಹಿಳೆಯರುʼ ಕಾರ್ಯಕ್ರಮದಲ್ಲಿ ಡಾ. ಎಚ್ ಎಸ್ಅನುಪಮಾ, ನೂರಾರು ಮಹಿಳೆಯರು ಕತ್ತಲಿನಲ್ಲಿ ಮೇಣದ ಬತ್ತಿ ಹಿಡಿದು ಬೆಳಕಿನ ಧಾರೆ ಎರೆದರು. ಇಂದು ಗುಬ್ಬಿ ವೀರಣ್ಣ ರಂಗಮಂದಿರದ ಸಾರಾ ಅಬೂಬಕರ್ ವೇದಿಕೆಯಲ್ಲಿ ವಿಚಾರ ಸಂಕಿರಣ ನಡೆಯುತ್ತಿದೆ. ಸಂಕಿರಣದಲ್ಲಿ ಮೊದಲ ಗೋಷ್ಠಿಯೇ ಹೆಣ್ಣು ಬದುಕು- ಸವಾಲು ಸಾಧ್ಯತೆಗಳು. ದಿಕ್ಸೂಚಿ ಮಾತನಾಡಿದವರು ಬೆಂಗಳೂರಿನ ವಿಹಾನ್ರವರು. ವಿಹಾನ್ ಲಿಂಗ ಪರಿವರ್ತಿತ ಸಮುದಾಯಕ್ಕೆ ಸೇರಿದವರು. ವಿಶೇಷವಾಗಿ ಹೆಣ್ಣು ಗಂಡಾಗಿ ಪರಿವರ್ತಿತವಾದ ಅಸಾಧಾರಣ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ. ಇವರೊಂದಿಗೆ ವೇದಿಕೆಯಲ್ಲಿ ಬದ್ಧತೆಯುಳ್ಳ ಸಾಮಾಜಿಕ ಕಾರ್ಯಕರ್ತರು, ವಕೀಲರು, ಪ್ರಾಧ್ಯಾಪಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನ ವಕೀಲರು ಹಾಗೂ ಒಕ್ಕೂಟದ ಸದಸ್ಯರಾದ ಸುಮನಾರವರು ಮಹಿಳಾ ದಿನಾಚರಣೆಯ ಹಿನ್ನೆಲೆ, ಪ್ರಸ್ತುತತೆ ಮತ್ತು ಅದರ ಘೋಷವಾಕ್ಯ ಕುರಿತು ಮಾತನಾಡಿದರು. ವಿಹಾನ್ ದಿಕ್ಸೂಚಿ ಮಾತಿನಲ್ಲಿ ಇಂದು ನಮ್ಮ ಎಲ್ಲಾ ನಡವಳಿಕೆಗಳನ್ನು, ಉದಾಹರಣೆಗೆ- ನಮ್ಮ ಉಡುಪು, ಆಹಾರ, ಆಚಾರ- ವಿಚಾರಗಳನ್ನು ರಾಜಕೀಯವಾಗಿ ನೋಡಲಾಗುತ್ತಿದೆ. ಲಿಂಗ ಪರಿವರ್ತಿತ ಸಮುದಾಯವನ್ನು ರಾಜಕೀಯವಾಗಿ ನ್ಯಾಯಯುತವಾಗಿ ನಡೆಸಿಕೊಳ್ಳುವುದು ಕಾಣುತ್ತಿಲ್ಲ. ಆ ಸಮಾಜಕ್ಕೆ ಸಾಮಾಜಿಕ ಭದ್ರತೆ ಬೇಕು. ಲಿಂಗ ಅಸಮಾನ ಹಿಂಸೆಯಿಂದ ಮುಕ್ತಿ, ಆಸ್ತಿ ಹಕ್ಕುಗಳು, ವಿವಾಹ ಹಕ್ಕುಗಳು ಎಲ್ಲವನ್ನು ಒದಗಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ಅವರನ್ನೂ ಒಳಗೊಳ್ಳಿಸುವುದು ಪ್ರಮುಖ ಕೆಲಸವಾಗಬೇಕು ಎಂದರು. ಅನೇಕ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದಾರೆ. ಹೆಣ್ಣು ಮಕ್ಕಳ ಬದುಕಿನಲ್ಲಿ ಬರುವ ಸವಾಲು ಮತ್ತು ಸಾಧ್ಯತೆಗಳನ್ನು ಎಲ್ಲಾ ಸಮುದಾಯದ ಹೆಣ್ಣು ಮಕ್ಕಳ ದೃಷ್ಟಿಯಿಂದಲೂ ನೋಡಬೇಕು. ಸವಾಲುಗಳು ನಿರಂತರವಾಗಿವೆ. ದುಡಿಯುವ ಮಹಿಳೆಯರು ೮೦% ಇರುವ ನಮ್ಮ ಸಮಾಜದಲ್ಲಿ ಎಲ್ಲಾ ರೀತಿಯಲ್ಲೂ ಅಂದರೆ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಸವಾಲುಗಳೇ ಹೆಚ್ಚು.
ಇದನ್ನು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಯಾದ ಬದುಕು ಕಟ್ಟಿಕೊಳ್ಳುವುದು ಮಹಿಳಾ ಸಮುದಾಯದ ಕೈಯಲ್ಲಿಯೇ ಬಹುತ್ವದ ಕಡೆಗೆ ನಮ್ಮ ನಡಿಗೆ ಇದೆ. ಅವರಿಗೆ ನೀಡುವ ಶಿಕ್ಷಣ, ಕುಟುಂಬದಲ್ಲಿ ಗೌರವ, ಉದ್ಯೋಗಾವಕಾಶಗಳು, ಉನ್ನತ ಶಿಕ್ಷಣ, ರಾಜಕೀಯ ಅವಕಾಶಗಳನ್ನು ಅವರು ಯೋಗ್ಯರೀತಿಯಲ್ಲಿ ಬಳಸಿಕೊಳ್ಳಬೇಕು. ಆಗ ಮಾತ್ರ ಬದುಕು ಅರ್ಥಪೂರ್ಣವೆನಿಸಿ ಸಮಸಮಾಜದತ್ತ ಮುಖ ಮಾಡಲು ಸಾಧ್ಯವಾಗುತ್ತದೆ. ಗೋಷ್ಠಿಯಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ವಿಹಾನ್ ಅವರ ಮಾತುಗಳನ್ನು ಅನುಮೋದಿಸುತ್ತ, ೨೬ ವರ್ಷದ ವಿಹಾನ್ ಅವರು ತಮ್ಮ ಜೀವನದಲ್ಲಿ ಅನೇಕ ತುಮುಲಗಳನ್ನು ಅನುಭವಿಸಿದರು. ಹೆಣ್ಣು ಮಗುವನ್ನು ಸಮಾಜ ದೈಹಿಕವಾಗಿ ದುಡಿಸಿಕೊಳ್ಳುವುದನ್ನು ವಿರೋಧಿಸಿ, ನಾನು ಹೆಣ್ಣಾಗಿರುವುದಿಲ್ಲ ಗಂಡಾಗಬೇಕು ಎಂದು ಪರಿವರ್ತಿತರಾದವರು ಅವರು. ಇಂಥ ವ್ಯಕ್ತಿ ವಿದೇಶದಲ್ಲಿ ಓದಿ ವಿವೇಕವನ್ನು ಪಡೆದ ನಂತರ ಮತ್ತೆ ಅಂತದೇ ಸಮುದಾಯವನ್ನು ಮೇಲೆತ್ತಲು ಶ್ರಮಿಸುತ್ತಿದ್ದಾರೆ. ಹೆಣು ಗಂಡು ಭೌತಿಕ ವ್ಯತ್ಯಾಸವೇ ಹೊರತು ಮನಸ್ಸು ಅಲ್ಲ. ರಚನಾತ್ಮಕ ಕೆಲಸಕ್ಕೆ ಹೆಣ್ಣು ಗಂಡು ಬೇರೆ ಅಲ್ಲವೇ ಅಲ್ಲ. ಅದಕ್ಕೆ ಒಂದು ಮನಸ್ಸು ಮುಖ್ಯ. ಮೈಸೂರಿನ ಸುಮನಾ ಅವರ ಮಾತನ್ನು ಸದಾ ನೆನಪಿಟ್ಟುಕೊಳ್ಳಬೇಕು. ಹೋರಾಟದ ಫಲವಾಗಿ ಮಹಿಳಾ ದಿನಾಚರಣೆ ಆಚರಣೆಗೆ ಬಂದಿತಾದರೂ ಮುಂದುವರಿಸುವುದು ಮುಖ್ಯ.
ಜನಗಳ ಹತ್ತಿರ ಹೋಗಿ ಅವರಿಗೆ ಬೇಕಾಗುವ ಸಾಮಾಜಿಕ, ಭಾವನಾತ್ಮಕ, ನೈತಿಕ ಬೆಂಬಲ ನೀಡಬೇಕಾಗಿರುವುದು ಹೋರಾಟಗಾರರ ಲಕ್ಷಣ. ಪ್ರೊ. ಗೀತಾ ವಸಂತ ಅವರ ಮಾತು ತುಂಬಾ ಅನುಕರಣೀಯ. ಸಮಾಜದಲ್ಲಿ ನಾನು ಮೊದಲು ಬದಲಾಗಬೇಕು; ನಂತರ ನಾವು ಆಗುತ್ತೇವೆ. ಮುಂದೆ ನಮ್ಮ ಅಸ್ಮಿತೆ ಸಮುದಾಯದೊಂದಿಗೆ ಮಾತ್ರ ಎಂಬ ಮಾತನ್ನು ಒಪ್ಪಬೇಕು. ಮತ್ತೊಬ್ಬ ಪ್ರಾಧ್ಯಾಪಕರಾದ ಡಾ. ಜ್ಯೋತಿ ಅವರು ಹೆಣ್ಣು ಗಂಡು ಸೇರಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ. ಕೆಲವು ಬಾರಿ ಪ್ರತ್ಯೇಕವಾಗಿ ಕೆಲಸ ಮಾಡುವ ಸಂದರ್ಭ ಬಂದಾಗಲೂ ಎದೆಗುಂದದೆ ಕೆಲಸ ಮಾಡಬೇಕಾಗುತ್ತದೆ. ಪ್ರೊ. ಟಿ ಗಿರಿಜಾ ಅವರು ಮಾಯಾ ಏಂಜಲೋ ಅವರ ಭಾವಾನುವಾದ ಕವಿತೆಯೊಂದರ ʼನಾ ಮತ್ತೆ ಪುಟ್ಟಿದೇಳುವೆʼ ಎಂಬ ಕವನ ವಾಚಿಸಿದರು. ಪುಟಿದೆದ್ದವರ ಬಗ್ಗೆ ಕವನ ರಚನೆಯಾಗಬೇಕು. ಹೆಣ್ಣುಮಕ್ಕಳ ಸಾಧನೆಗಳನ್ನು ಬಹುತ್ವದ ಕಡೆಗೆ ನಮ್ಮ ನಡಿಗೆ ತಿಳಿಸುತ್ತಲೇ ಮಹಿಳಾ ಸಮುದಾಯವನ್ನು ಮೇಲೆತ್ತುವ ಕೆಲಸ ಸದಾ ಆಗುತ್ತಿರಬೇಕು. ಹೆಣ್ಣುಮಕ್ಕಳಿಗೆ ಮಹಿಳಾ ದಿನಾಚರಣೆಯಂದು ಮಾತ್ರ ಸವಲತ್ತು ಕೊಡುವ ಬಗ್ಗೆ ಮಾತಾಡುವ ಸರ್ಕಾರ ಅವರ ಬದುಕನ್ನು ಮೇಲೆತ್ತುವ ರೀತಿಯಲ್ಲಿ ಯೋಚನೆ ಮಾಡುತ್ತಿಲ್ಲ.
ಅವರ ಶಿಕ್ಷಣ
ಉದ್ಯೋಗದಂತಹ ಕ್ಷೇತ್ರದಲ್ಲಿ ಸವಲತ್ತು ನೀಡಬೇಕು. ಮಹಿಳಾ ದಿನಾಚರಣೆಯ ವಿಚಾರವೇ ಗೊತ್ತಿಲ್ಲದ ಸುಮಾರು ೮೦%
ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ಆಗಬೇಕು. ನೀವು ವೋಟ್ ಬ್ಯಾಂಕ್ ಮಾತ್ರ ಅಲ್ಲ ಎಂದು ತಿಳಿ ಹೇಳುವವರು ಯಾರು?
ಇದಕ್ಕೆ ನಾವೇ ಉತ್ತರ ಕೊಡಬೇಕು. ಇಂದು ಸಮಾಜದಲ್ಲಿ ಆತಂಕಪಡುವ ಒಂದು ಬೆಳವಣಿಗೆ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೆ
ಆರ್ಥಿಕ ಶಕ್ತಿ ನೀಡುವ ಸಲುವಾಗಿ ಹುಟ್ಟಿಕೊಂಡಿರುವ ಅನೇಕ ಸಂಘ ಸಂಸ್ಥೆಗಳು ಅವರಿಗೆ ಸಾಲ ನೀಡುವ ಸಂಸ್ಥೆಗಳಾಗಿವೆ. ಆರ್ಥಿಕ
ಸಬಲೀಕರಣದ ಹೆಸರಿನಲ್ಲಿ ಅವರನ್ನು ವಂಚಿಸಲಾಗುತ್ತಿದೆ. ಕೇವಲ ಹಣ ಒಂದೇ ಅವರ ಅವಶ್ಯಕತೆ ಎಂದು ನೋಡಲಾಗುತ್ತಿದೆ.
ಸಾಲದ ಕೂಪದಲ್ಲಿ ಬಿದ್ದ ಅವರ ಜೀವ, ಜೀವನ ನೆಲೆ ಕಳೆದುಕೊಳ್ಳುವ ಹಂತ ತಲುಪುತ್ತಿದೆ. ಹಾಗಾಗಿ ಅವರಿಗೆ ಈ ಬಗ್ಗೆಯೂ ಅರಿವು
ಮೂಡಿಸುವ ಕೆಲಸ ಆಗಬೇಕು. ಪಡೆದುಕೊಂಡ ಸಾಲ ಅವರನ್ನು ಸ್ವಾವಲಂಬಿಯಾಗುವಂತೆ ಮಾಡುವಂತೆ ಗಮನ ಹರಿಸಬೇಕು.
ಒಟ್ಟಾರೆ ಈ ಸಮಾವೇಶ ಯಶಸ್ವಿಯಾಗಿ ನಡೆದಿದೆ. ಅದಕ್ಕಾಗಿ ಶ್ರಮ ವಹಿಸಿದ ಎಲ್ಲ ಸಂಗಾತಿಗಳಿಗೂ ಅಭಿನಂದನೆ ಹಾಗೂ
ಧನ್ಯವಾದಗಳು.